ಗದಗ, ಜುಲೈ, 5 : ಪ್ರಸಿದ್ಧ ಅರಸರ ಆಳ್ವಿಕೆಯ ಆಡಳಿದಲ್ಲಿದ್ದ ಗದಗ ಜಿಲ್ಲೆಯೂ ಐತಿಹಾಸಿಕ ದೇವಾಲಯಗಳ ತೊಟ್ಟಿಲು ಎಂದು ಕಾನೂನು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ಕೆ ಪಾಟೀಲ್ರು ಅಭಿಪ್ರಾಯಪಟ್ಟರು. ಅವರು ಶನಿವಾರ ಗದಗ ನಗರದ ಸೋಮೇಶ್ವರ ರಸ್ತೆಯಲ್ಲಿರುವ ಐತಿಹಾಸಿಕ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಮಾತನಾಡಿದರು. ಗದಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವ ಮತ್ತು ಇತಿಹಾಸವನ್ನು ತಿಳಿಸುವ ಪ್ರಸಿದ್ಧ ದೇವಸ್ಥಾನಗಳಿದ್ದು ಇಂತಹ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಯುವ ಪೀಳಿಗೆಗೆ ಇತಿಹಾಸದ ಪರಿಚಯ ಮಾಡಿಸಬೇಕಾದ ಅಗತ್ಯ ಇದೆ ಎಂದರು. ರಾಮೇಶ್ವರ ದೇವಸ್ಥಾನವು ಬಹುದೊಡ್ಡ ಇತಿಹಾಸ ಹೊಂದಿರುವ ಹಿನ್ನಲೆ ರಾಮೇಶ್ವರ ದೇವಸ್ಥಾನ ವೀಕ್ಷಿಸಲು ಆಗಮಿಸಿದ್ದು ರಾಮೇಶ್ವರ ದೇವಸ್ಥಾನ ಸೇರಿದಂತೆ ಐತಿಹಾಸಿಕ ಪ್ರಸಿದ್ಧ ದೇವಸ್ಥಾನಗಳ ಸಂಪೂರ್ಣ ವಿಷಯಗಳ ಕುರಿತು ತಿಳಿಸಿ ಕೊಡುವ ಪ್ರಯತ್ನ ಸರಕಾರ ಕೈಗೆತ್ತಿಕೊಳ್ಳಲು ಆಸಕ್ತಿ ಹೊಂದಿದೆ ಎಂದರು. ದೇವಸ್ಥಾನದ ಮೂಲ ಆಕೃತಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರದಿಂದ ಜೀರ್ಣೋದ್ದಾರ ಕೈಗೊಳ್ಳಲು ಚಿಂತನೆ ನಡೆದಿದೆ ಎಂದರು. ಸರ್ಕಾರದಿಂದ ನಡೆಸುವ ಐತಿಹಾಸಿಕ ದೇವಸ್ಥಾನಗಳ ಜಿರ್ಣೋದ್ದಾರ ಕಾರ್ಯಕ್ಕೆ ದೇವಸ್ಥಾನ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು, ಸಾರ್ವಜನಿಕರು ಸೂಕ್ತ ಸಹಕಾರ ನೀಡಬೇಕೆಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು. ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಅಧ್ಯಕ್ಷ ಬಿ.ಬಿ.ಅಸೂಟಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಎಸ್.ಎನ್.ಬಳ್ಳಾರಿ, ರವಿ ಮೂಲಿಮನಿ, ಉಮರಫಾರೂಕ್ ಹುಬ್ಬಳ್ಳಿ, ಅ.ದ.ಕಟ್ಟಿಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP