ಗದಗ,ಜೂ.14 : ಪಕ್ಷದ ನಿಷ್ಠಾವಂತರು, ದಕ್ಷ, ಪ್ರಾಮಾಣಿಕ, ಅನುಭವಿ ನಾಯಕ ಎಚ್ಕೆ ಪಾಟೀಲರಿಗೆ ಮಂತ್ರಿಗಿರಿ ಕೊಡಬೇಕು, ಇಲ್ಲದಿದ್ದರೆ ನಗರಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಗದಗ ಬೆಟಗೇರಿ ನಗರಸಭೆಯ ಕಾಂಗ್ರೆಸ್ಸಿನ ಬಹುತೇಕ ಸದಸ್ಯರು ನಿರ್ದರಿಸಿದ್ದಾರಲ್ಲದೆ ಇದು ಬೆದರಿಕೆಯಲ್ಲ ಎಚ್ಕೆ ಪಾಟೀಲರ ನಾಯಕತ್ವಕ್ಕೆ ಇರುವ ಬದ್ಧತೆ ಎಂದು ಎಚ್ಚರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮೊದಲ ಹಂತದ ಮಂತ್ರಿ ಮಂಡಲದಲ್ಲಿ ಎಚ್ಕೆ ಪಾಟೀಲರು ಮಂತ್ರಿಯಾಗಿರದೆ ಇರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ನೋವು ತೊಡಿಕೊಂಡಿರುವ ನಗರಸಭೆಯ ಕಾಂಗ್ರೆಸ್ ಸದಸ್ಯರು ಮುಂದಿನ ಮಂತ್ರಿ ಮಂಡಲ ರಚನೆಯಲ್ಲಿ ಎಚ್ಕೆ ಪಾಟೀಲರು ಪ್ರಮುಖ ಖಾತೆಯೊಂದಿಗೆ ಆಡಳಿತದಲ್ಲಿ ಇರಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಎಚ್ಕೆ ಪಾಟೀಲರ ಜೊತೆ ರಾಜಕೀಯ ಮಾಡಿ ಕಡೆಗಣಿಸಿದರೆ ಗದಗ ಬೆಟಗೇರಿ ನಗರಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೋರಾಟದ ಹಾದಿ ಹಿಡಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗದಗ ಬೆಟಗೇರಿ ನಗರಸಭೆಯ 35 ಸದಸ್ಯರ ಪೈಕಿ ಕಾಂಗ್ರೆಸ್ ಪಕ್ಷದ 17 ಸದಸ್ಯರಿದ್ದಾರೆ. ಈ 17 ಸದಸ್ಯರ ಪೈಕಿ ಬಹುತೇಕ 13 ಕ್ಕೂ ಹೆಚ್ಚು ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ನಿರ್ಧರಿಸಿದ್ದು ಪಕ್ಷದ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ನಗರಸಭೆಯ ಸದಸ್ಯತ್ವ ರಾಜೀನಾಮೆ ಕೇವಲ ಬೆದರಿಕೆ ಅಥವಾ ಬ್ಲಾಕ್ ಮೇಲ್ ಅಲ್ಲ. ಇದು ಎಚ್ಕೆ ಪಾಟೀಲರ ನಾಯಕ್ವತಕ್ಕೆ ತೋರುವ ಬದ್ಧತೆ ಎಂದು ಸದಸ್ಯರು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ನಾಲ್ಕೂವರೆ ದಶಕಗಳ ಕಾಲ ಪಕ್ಷದ ಬೆಳವಣಿಗೆಯಲ್ಲಿ ನಿಷ್ಠೆಯೊಂದಿಗೆ ಸಾಗಿ ಬಂದಿರುವ ಜನಪ್ರಿಯ ನಾಯಕ ಎಚ್ಕೆ ಪಾಟೀಲರಿಗೆ ಮಂತ್ರಿಗಿರಿ ಕೊಡಿ ಎಂದು ಕೇಳುವಂತಹ ಸ್ಥಿತಿ ಬಂದಿದೆ ಎಂದರೆ ಆಶ್ಚರ್ಯ ಎನಿಸದೆ ಇರಲಾರದು.
© ASK News Kannada. All Rights Reserved. Designed by AGScurate IT Solutions LLP